Search This Blog

Sunday 20 March 2016

ಕನಸು ನನಸು

ಕನಸು ನನಸು
ಕನಸು ಕಾಣಲು ಕಾಸು ಬೇಡ. ನಿಜ. ಬದುಕಿನ ಗುರಿಯನ್ನು ಹೊತ್ತ ಕನಸುಗಳನ್ನು ನನಸುಗೊಳಿಸಿ ಕೊಳ್ಳುವ ತನಕ   ಕನಸು ಕಾಣಬೇಕು. ಪ್ರತಿಯೊಬ್ಬರೂ ತಮ್ಮದೇ ಗುರಿಹೊತ್ತ
ವಿಭಿನ್ನ ಕನಸು ಕಾಣುತ್ತಾರೆ.ಈ ದೇಶದ ಕೆಲವು ಮಹಾನ ನಾಯಕರು ಸಮಗ್ರ ಸಮಾಜ ಸುಧಾರಣೆ, ರಾಷ್ಟ್ರಅಭಿವೃದ್ಧಿಯ ಕನಸು ಕಂಡಿದ್ದರು.
" ಸ್ವತಂತ್ರ ಭಾರತದ ಸುಂದರ ಕನಸು" ಮಹಾತ್ಮ ಗಾಂಧಿಯವರದು ಆಗಿತ್ತು.
"ಜಾತಿ ನಿರ್ಮೂಲನದ ಕನಸು " ಡಾ.ಬಿ.ಆರ್.ಅಂಬೇಡ್ಕರವರ ಆಗಿತ್ತು.
"ಭಾರತ ದೇಶವನ್ನು ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿಸುವಲ್ಲಿ 2020 ನೆೇ ವರ್ಷಕ್ಕೆ ಸಫ಼ಲರಾಗುತ್ತೆವೆ "  ಎಂದು ದೂರದರ್ಷತ್ವದ ಕನಸು ಕಂಡಿದ್ದರು ಡಾ.ಎಪಿಜೆ  ಅಬ್ದುಲ್ ಕಲಾಂ ರವರು. ತಮ್ಮ ಕೊನೆ ಉಸಿರು ಇರುವ ತನಕ ಸಾಧನೆಗೈದ ಮಹಾನ್ ಚೇತನರು. ಅವರ ಆದರ್ಶ ಯುವ ಸಮಾಜಕ್ಕೆ ಮಾರ್ಗದರ್ಶಿ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಿದೆ.
ಕಾವೇರಿ ನದಿಗೆ "ಕನ್ನಂಬಾಡಿ ಆಣೆಕಟ್ಟು" ಕಟ್ಟುವ ಕನಸು  ಭಾರತರತ್ನ  ಭಾಗ್ಯಶಿಲ್ಪಿ  ಸರ್. ಎಂ. ವಿಶ್ವೇಶ್ವರಯ್ಯನವರದು ಆಗಿತ್ತು. ಈ ಆಣೆಕಟ್ಟು ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಸಾವಿರಾರು ಎಕರೆಗೆ ನೀರುಣ್ಣಿಸುತ್ತದೆ.  ಆಹಾ! ನಮ್ಮ ಈ ಕನ್ನಡ ಸಿರಿನಾಡು , ಬಂಗಾರ ಬೆಳೆಯುವ ಹೊನ್ನಾಡು ಆಗಿದೆ.
ಕರ್ನಾಟಕ ಒಂದುಗೂಡಿಸುವ ಕನಸು ಕಂಡ ಕನ್ನಡಿಗರು
" ಕರ್ನಾಟಕ  ಏಕೀಕರಣ ಹೋರಾಟ" ನಡಿಸಿದ್ದರ ಫಲವಾಗಿ 1956 ರಲ್ಲಿ ಕನ್ನಡ ಪ್ರದೇಶಗಳು " ಮೈಸೂರು ರಾಜ್ಯ " ಎನ್ನುವ ಹೆಸರಿನಲ್ಲಿ ಒಂದುಗೂಡಿದವು .ಮುಂದೆ 1972 ರಲ್ಲಿ "ಕರ್ನಾಟಕ " ರಾಜ್ಯ ಅಂತಾ ಮರು ಹೆಸರಿಸಲಾಯಿತು." ನಮ್ಮ "  ಸುವರ್ಣ ಕರ್ನಾಟಕ"ಕ್ಕೆ. ಜಯವಾಗಲಿ!!.
ಉತ್ತರಕನ್ನಡ ಜಿಲ್ಲೆಯ ಶೈಕ್ಷಣಿಕ ಅಭಿವೃದ್ದಿಗಾಗಿ ಧೀಮಂತ ನಾಯಕರೊಬ್ಬರು ಕಂಡ ಕನಸು ಹೀಗಿತ್ತು.

"ನಡು ಹಗಲಲ್ಲಿ ನನಗೆ ಬೀಳುವದು ಕನಸು।
 ಈ ಕನಸಿನಿಂದ  ಚಿಗುರುವದುಂಟು ಮನಸು।
 ಒಂದೊಂದು ಚಿಗುರಿಗೂ ಒಂದೊಂದು ಶಾಲೆ।
 ಮೂಡಿದರೆ ಶಾರದಾಂಬೆಗೆ ಪುಷ್ಪಮಾಲೆ."।
ಇದು ಉತ್ತರಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ
ಕ್ರಾಂತಿಗೆ ಹರಿಕಾರರಾದ " ಚುಟುಕು ಬ್ರಹ್ಮ " ಶ್ರೀ . ದಿನಕರ ದೇಸಾಯಿ ಯವರ ಕನಸು.
 ಅಂದು ,  1953 ರ ಮೊದಲು ಉತ್ತರಕನ್ನಡ ಜಿಲ್ಲೆಯ ಅನೇಕ ಹಳ್ಳಿಯ ವಿದ್ಯಾರ್ಥಿಗಳು ಮುಲ್ಕಿ ( ಏಳನೇ ಇಯತ್ತೆ) ವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿ ಗದ್ದೆ ಕೆಲಸ, ಕೂಲಿ, ಹೋಟೆಲ ನಲ್ಲಿ ಕೆಲಸ ,ಕಿರಾಣಿ ಅಂಗಡಿಯಲ್ಲಿ ಕೆಲಸ,   ಲಾರಿ ಕ್ಲೀನರ್, ಇನ್ನೀತರ ಕೆಲಸ ದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಏಕಂದರೆ ಮಾಧ್ಯಮಿಕ ಶಿಕ್ಷಣ ಮುಂದುವರಿಸಲು ಹತ್ತರ ಹೈಸ್ಕೂಲ್ ( ಮಾಧ್ಯಮಿಕ  ಶಾಲೆ ) ಇದ್ದಿರಲಿಲ್ಲ.ಹೈಸ್ಕೂಲ್  ಇದ್ದ ದೂರದ ಊರಿಗೆ ಕಾಲುನಡಿಗೆಯಲ್ಲಿ ಹೋಗಬೇಕಾಗಿತ್ತು. ಇನ್ನು ಕೆಲವು ಊರಿಗೆ ದೋಣಿಯಲ್ಲಿ ಹೊಳೆ ದಾಟಬೇಕಿತ್ತು.ಮಳೆಗಾಲದಲ್ಲಿ   ದೂರದ ಊರಿಗೆ ಹೈಸ್ಚೂಲಿಗೆ ಓದಲು ಹೋಗುವ ವಿದ್ಯಾರ್ಥಿಗಳ ಪಾಡು ಅಂತೂ ಹೇಳಿ ತೀರದು. ಉತ್ತರಕನ್ನಡ ಜಿಲ್ಲೆಯ ಗ್ರಾಮೀಣ  ವಿದ್ಯಾರ್ಥಿಗಳ
ಈ ಕಷ್ಟವನ್ನು ಕಂಡ ಶ್ರೀ. ದಿನಕರ ದೇಸಾಯಿ ಯವರು  1953 ರಲ್ಲಿ "ಕೆನರಾ ವೆಲ್‍ಫೇರ್ ಟ್ರಸ್ಟ್ " ಸ್ಥಾಪಿಸಿದರು. ಈ ಟ್ರಸ್ಟ್ ಮೂಲಕ ಉತ್ತರಕನ್ನಡ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿ ಗಳಲ್ಲಿ "ಜನತಾ ವಿದ್ಯಾಲಯ" ಹೆಸರುಳ್ಳ ಹೈಸ್ಕೂಲುಗಳನ್ನು ಪ್ರಾರಂಭಿಸಿದರು . ಈ ರೀತಿ ಶಿಕ್ಷಣ ಕ್ರಾಂತಿಯ ಮೂಲಕ ಬದಲಾವಣೆ ಅಲೆ ಎಬ್ಬಿಸಿದರು .
ಇಂದು ಕೆನರಾ ವೆಲ್‍ಫೇರ್ ಟ್ರಸ್ಟ್ ಹೆಮ್ಮರವಾಗಿ ಬೆಳೆದಿದೆ .42 ಸಂಸ್ಥೆಗಳನ್ನು ಪೋಷಿಸುತ್ತದೆ. ಈ ಸಂಸ್ಥೆಯ ಶಾಲೆಗಳಲ್ಲಿ ಓದಿದ  ಅನೇಕ ವಿದ್ಯಾರ್ಥಿಗಳು ಇಂದು ವಿಶ್ವದ ಮೂಲೆ ಮೂಲೆಯಲ್ಲಿ ನೆಲೆಸಿದ್ದಾರೆ . ಪ್ರತಿಷ್ಟಿತ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಉನ್ನತ ಶೈಲಿಯ ಜೀವನ ನಡೆಸುತ್ತಿದ್ದಾರೆ. ಹಲವರು ಒಳಿತನ್ನು ಕಂಡಿದ್ದಾರೆ.ಇನ್ನು ಕೆಲವರು ಒಳಿತನ್ನು ಕಾಣುತ್ತಿದ್ದಾರೆ .ನಾನೂ ಸಹ
ಈ ಸಂಸ್ಥೆಯ ಹೈಸ್ಕೂಲ್ ನಲ್ಲಿ ಓದಿ ನನ್ನ ಕನಸಿನ ಜೀವನ ರೂಪಿಸಿಕೊಂಡವನು.  
     ನಾನು ಹುಟ್ಟಿದ್ದು  ಕಾರವಾರ  ತಾಲ್ಲೂಕಿನ ಕಡವಾಡ ಗ್ರಾಮದ ಬಡ ರೈತ ಕುಟುಂಬದಲ್ಲಿ . ಕಾಳಿನದಿ ದಡದ  ಮೇಲೆ ಇರುವ ಚಿಕ್ಕಹಳ್ಳಿ.  ನನಗೆ ನಮ್ಮ ಮನೆ ಹತ್ತರವಿರುವ  ಕನ್ನಡ ಶಾಲೆಗೆ ಸೇರಿಸಿದ್ದರು. ಕ್ಲಾಸಿನಲ್ಲಿ ಕಲಿಸಿದ ಪಾಠ ವನ್ನು ಚೆನ್ನಾಗಿ ಅರ್ಥಮಾಡಿ ಕೊಳ್ಳುತ್ತಿದ್ದೆ. ಕ್ಲಾಸಿನಲ್ಲಿ ಶಿಕ್ಷಕರಿಂದ  " ಶಾಭಾಶ್" ಅನಿಸಿಕೊಂಡಿದ್ದೆ.     "ಗಂಟೆಯ ನೆಂಟನೆ ಓ ಗಡಿಯಾರ   ಬೆಳ್ಳಿಯ ಬಣ್ಣದ ಗೋಳಾಕಾರ   ವೇಳೆಯ ತಿಳಿಯಲು ನೀನಾಧಾರ   ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್   ...." ಎಂಬ ಶ್ರೀ.ದಿನಕರ ದೇಸಾಯಿ ರವರು ಬರೆದ ಕವಿತೆ ಹಾಡುತ್ತ ತಿಂಗಳು,ವರುಷಗಳು ಊರುಳಿದವು. ಕೆಳಗಿನ ತರಗತಿಯಿಂದ ತೇರ್ಗಡೆ ಯಾಗಿ ಮೇಲಿನ ತರಗತಿಗೆ ಹೋಗುತ್ತಿದ್ದೆ.
"ನಿನ್ನ ಮಗ ಓದಿನಲ್ಲಿ ತುಂಬಾ ಚುರುಕಾಗಿದ್ದಾನೆ. ಅವನಿಗೆ ಶಾಲೆಯಿಂದ ಬಿಡಿಸಬೇಡ. ಮುಂದೆ ಚೆನ್ನಾಗಿ ಓದಿಸು ." ಎಂದು ನನ್ನ ಶಾಲೆ ಶಿಕ್ಷಕರು ನಮ್ಮಪ್ಪನಿಗೆ ಭೇಟಿಯಾದಾಗೆಲ್ಲ ಪದೇ ಪದೇ ಹೇಳುವ ಕಿವಿ ಮಾತಿದು .
ನಮ್ಮ ಶಿಕ್ಷಕರ  ಈ ಮಾತನ್ನು ಕೇಳಿದಾಗಲೆಲ್ಲ , ನನ್ನಪ್ಪ ಖಿನ್ನಮನಸ್ಕನಾಗುತ್ತಿದ್ದರು. ಯಾಕಂದರೆ , ಕೊನೆ ಪಕ್ಷ ಮೆಟ್ರಿಕ್ ವರೆಗೆ ಓದಿಸುವಷ್ಟು ಆರ್ಥಿಕ ಶಕ್ತಿ  ಅವರಿಗೆ ಇರಲಿಲ್ಲ.ಬೇಸಾಯ ದಿಂದ ಬಂದ ಎರಡು ಮೂರು ಮೂಟೆ ಅಕ್ಕಿ ಅವರಗಿದ್ದ ಆದಾಯ. ಅಂದು ನಮ್ಮೂರಲ್ಲಿ ಹೈಸ್ಕೂಲು ಇದ್ದಿರಲಿಲ್ಲ.ಹೈಸ್ಕೂಲಿಗೆ ಪಕ್ಕದ ದೂರದ ಊರು ನಂದನಗದ್ದ -  ಬಾಡ ಯಾ ಕಾರವಾರ ಗೆ ಹೋಗಬೇಕಾಗಿತ್ತು. ನಮ್ಮೂರ ಮತ್ತು ಪಕ್ಕದ ಊರು ಸುಂಕೇರಿ ನಡುವಿನ ಹೊಳೆಯನ್ನು ದೋಣಿಯಲಿ ದಾಟಬೇಕಿತ್ತು. ಮೆಟ್ರಿಕ ವರೆಗಿನ ಶಿಕ್ಷಣ ನಮ್ಮ ಬಾಯಿಗೆ ಎಟಕದ ಹಣ್ಣು ಎಂದು ಸುಮ್ಮರಾದೆವು. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರಲ್ಲ ಅನ್ನೋ ಗಾದೆ  ಮಾತಿದೆ . 1960 ರಲ್ಲಿ ಕೆನರಾ ವೆಲ್‍ಫೇರ್ ಟ್ರಸ್ಟ್ ರವರು ನಮ್ಮೂರಿನಲ್ಲಿ ಜನತಾ ವಿದ್ಯಾಲಯ ಪ್ರಾರಂಭಿಸಿದರು . ಮರುಭೂಮಿಯಲ್ಲಿ ನೀರು   ಸಿಕ್ಕಿದಷ್ಟು ಸಂತಸವಾಯಿತು.
ಏಳನೇ ಇಯತ್ತೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಪಾಸಾದೆ . ಶಾಲೆಗೆ ಪ್ರಥಮ ಸ್ಥಾನ ಗಿಟ್ಟಿಸಿದೆ. ಮುಂದೆ ಮಾಧ್ಯಮಿಕ ವ್ಯಾಸಂಗಕ್ಕೆ ಜನತಾ ವಿದ್ಯಾಲಯದಲ್ಲಿ  8ನೇ ತರಗತಿಗೆ ಪ್ರವೇಶ ಪಡೆದೆ. ಜನತಾ  ವಿದ್ಯಾಲಯದಲ್ಲಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ   ಕೆಲವು ಪಠ್ಯಪುಸ್ತಕಗಳು ಉಚಿತವಾಗಿ ಸಿಗುತ್ತಿದ್ದವು.ವರ್ಷಕೊಮ್ಮೆ ಒಂದು ಸೆಟ್ ಸಮವಸ್ತ್ರ ವಿತರಿಸುತ್ತಿದ್ದರು. ದೂರದಿಂದ ವಿದ್ಯಾಲಯಕ್ಕೆ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ಕೊಡುತ್ತಿದ್ದರು.
            ಹಚ್ಚು ಹಸಿರು ಗಿಡ ಮರಗಳಿರುವ ಗುಡ್ಡದ ಮೇಲೆ ನೆಲೆಸಿರುವ  ಈ ವಿದ್ಯಾಲಯದ ಕಟ್ಟಡ , ಸುಂದರ  ಪರಿಸರ, ವಿಶಾಲವಾದ ಆಟದ ಮೈದಾನ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿತ್ತು.ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಮಯಪಾಲನೆ, ಶಿಸ್ತು , ನಿಷ್ಠೆ ಮತ್ತು  ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಒತ್ತುನೀಡುತ್ತಿದ್ದರು .ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ ಹಾಗೂ ವಿದ್ಯಾರ್ಥಿಯ ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೆ ಅತ್ಯಗತ್ಯ ಎಂಬುದನು ಮನಗಂಡಿರುವ ವಿದ್ಯಾಲಯ  ಚರ್ಚಾಸ್ಪರ್ಧೆ, ಭಾಷಣಸ್ಪರ್ಧೆ, ಆಶುಭಾಷಣಸ್ಪರ್ಧೆ, ನಾಟಕ, ಕ್ವಿಜ್, ಸ್ಪರ್ಧೆ ಏರ್ಪಡಿಸುತ್ತಾ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ನೆರವಾಗುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಸರದಿಯಂತೆ ಪ್ರತಿ ನಿತ್ಯ ನಡೆಯುವ ಪ್ರಾರ್ಥನಾ ವೇದಿಕೆಗೆ ಬಂದು ತನ್ನಲ್ಲಿರುವ ಅಮೂಲ್ಯ ಚಿಂತನೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿತ್ತು .ನುರಿತ ಹಾಗೂ ಅನುಭವಿ ಶಿಕ್ಷಕರ ಬಳಗವನ್ನೇ ಹೊಂದಿರುವ  ಈ ವಿದ್ಯಾಲಯ ದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಎಲ್ಲ ವಿದ್ಯೆಯನ್ನು ನಿರ್ವಂಚನೆಯಿಂದ ಧಾರೆ ಎರೆಯುತ್ತಿದ್ದರು.   ಪಠ್ಯ ಪುಸ್ತಕದಲ್ಲಿರುವ ವಿಚಾರಗಳ ಜೊತೆ ಜೊತೆಗೆ ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸಲು ವಿಜ್ಞಾನ, ಇತಿಹಾಸ, ಕ್ರಿಡೆ, ಸಂಸ್ಕೃತಿ, ಪರಂಪರೆ ಇತ್ಯಾದಿ ವಲಯಗಳ ಹಲವು ಮಹತ್ವದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪ್ರಯತ್ನ ಇಲ್ಲಿ ನಿರಂತರವಾಗಿ ಮಾಡುತ್ತಿದ್ದರು  ಕಡವಾಡ ದ  " ಜನತಾ ವಿದ್ಯಾಲಯ ವಿದು , ಜ್ಞಾನ ದೇಗುಲ ವಿದು " 
    ಶ್ರೀ.ದಿನಕರ ದೇಸಾಯಿ ವಿರಚಿತ         "ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ  ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ;  ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ  ಧನ್ಯವಾಯಿತು ಹುಟ್ಟು ಸಾವಿನಲ್ಲಿ" .....ಎಂಬ ಇನ್ನೊಂದು ಕವನ ಈ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಸಿಕ್ಕಿದ್ದು ನನ್ನ ಭಾಗ್ಯ.
ವಿದ್ಯಾಲಯದಲ್ಲಿ ಏರ್ಪಡಿಸಿದ ಚರ್ಚಾಸ್ಪರ್ಧೆ, ಭಾಷಣಸ್ಪರ್ಧೆ, ಆಶುಭಾಷಣಸ್ಪರ್ಧೆ, ಕ್ವಿಜ್, ಪ್ರಬಂಧ  ಸ್ಪರ್ಧೆ ಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದೆ. ಓದಿನಲ್ಲಿಯೂ ಅಷ್ಟೇ ಚುರುಕು. 8 ರಿಂದ   10 ನೇ ತರಗತಿ ಯ ವರೆಗೆ ಅಂದರೆ ಸತತ ಮೂರೂ ವರುಷ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಪಾಸಾದೆ.  1968 ರಲ್ಲಿ ಜರುಗಿದ  ಎಸ್ . ಏಸ್. ಎಲ್ . ಸಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ  ಪಾಸು ಮಾಡಿದೆ . ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.  ಮೆಟ್ರಿಕ ವರೆಗಿನ ಶಿಕ್ಷಣದ ಕನಸು ನನಸಾಗಿತ್ತು.
ಕಾಲೇಜು ವ್ಯಾಸಂಗ ಮುಂದುವರಿಸುವ ಆಸೆ ಇತ್ತು. ಆದರೆ ಅದಕ್ಕೆ ದುಡ್ಡು ಬೇಕಿತ್ತು. ಅಷ್ಟು ದುಡ್ಡಿರಲಿಲ್ಲ. ತಿರುಕನ ಕನಸು ಕಾಣುವದರಲ್ಲಿ  ಏನು ಪ್ರಯೋಜನ ?. ಕಾರಣ  ಕಾಲೇಜು ವ್ಯಾಸಂಗ ಮುಂದುವರಿಸುವ ಗೋಜಿಗೆ ಹೋಗಲಿಲ್ಲ. ಎಸ್ . ಎಸ್ . ಎಲ್ .ಸಿ ಶಿಕ್ಷಣಾರ್ಹತೆ ಮೇಲೆ ನೌಕರಿ ಆರಂಭ ಮಾಡಿದೆ. ಮುಂದೆ ಮೈಸೂರು ವಿಶ್ವವಿದ್ಯಾಲಯ ನಿಂದ ಬಿ.ಎ. ಪದವಿ  ಹಾಗು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ
ವಿಶ್ವವಿದ್ಯಾಲಯ ನಿಂದ ಎಂ.   ಬಿ. ಎ. ಸ್ನಾತಕೋತ್ತರ ಪದವಿ ಪಡೆದೆ. ಕೆಲಸದ ಅವಕಾಶಗಳು ಕೈ ಬೀಸಿ ಕರೆದವು. ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ಉತ್ತಮ  ಶೈಲಿಯ ಜೀವನ ವನ್ನು ರೂಪಿಸಿಗೊಂಡಿದ್ದೇನೆ. ನನ್ನ ಕನಸು ನನಸಾಗಿದೆ.   ಶ್ರೀ .ದಿನಕರ ದೇಸಾಯಿ ರವರಿಗೆ ಹಾಗೂ ನನ್ನ ಶಿಕ್ಷಕರಿಗೆ  ಇದೋ ನನ್ನ ಸಹಸ್ರ ಸಹಸ್ರ ನಮನಗಳು.
"। ನಹೀ ಜ್ಞಾನೇನ ಸದೃಶಂ ।"

Tuesday 8 March 2016

ನೆನಪಿನ ದೋಣಿಯಲಿ....ಕವಳ ಗುಹೆ


ನೆನಪಿನ ದೋಣಿಯಲಿ....ಕವಳ ಗುಹೆ


    ಅಂದು ಭಾನುವಾರ  ಮಧ್ಯಾನ ನಾನು ನನ್ನ ಪತ್ನಿ ಮತ್ತೆ ಹುಡುಗರು ಊಟ ಮುಗಿಸಿ ಹರಟೆಯಲ್ಲಿ ಮಗ್ನವಾಗಿದ್ದೆವು.ಇಡೀ ವಾರ ಕೆಲಸ.ಎಲ್ಲರೂ ಜೊತೆಜೊತೆಯಲಿ ಮಧ್ಯಾನ ಊಟಮಾಡುವದು ಭಾನುವಾರ ಮಾತ್ರ.
"ರೀ, ನಾಳೆ ಶಿವರಾತ್ರಿ. ಸಾಯಂಕಾಲ ಮಾರ್ಕೆಟಿಗೆ ಹೋಗಿ
ಹೂವು, ಹಣ್ಣು, ಹಾಗು ಶಿವ ಪೂಜಾ ಸಾಮಗ್ರಿ ತರಬೇಕು.." ಎಂದು ಜ್ಞಾಪಿಸಿದರು.
 ಮಹಾಶಿವರಾತ್ರಿ ಅಂದ ತಕ್ಷಣ ನೆನಪಿಗೆ ಬಂತು ಉತ್ತರ ಕನ್ನಡ ಜಿಲ್ಲೆಯ ಅಣಶಿ ರಕ್ಷಿತ ಅಭಯಾರಣ್ಯದಲ್ಲಿರುವ ಕವಳ ಗುಹೆ.ಶಿವರಾತ್ರಿಯ ದಿನದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆ.ಪ್ರತಿ ವರ್ಷ ಶಿವರಾತ್ರಿಯಂದು ಸಾವಿರಾರು ಜನರು ಕವಳ ಗುಹೆಗೆ ಆಗಮಿಸುತ್ತಾರೆ.
 ಅಂಬಿಕಾನಗರ ದಲ್ಲಿ ಕೆಲಸ ಮಾಡುವಾಗ,ನಾನು ಸಹದ್ಯೋಗಿಗಳ ಜೊತೆ ಶಿವರಾತ್ರಿ  ದಿನ ಕವಳ ಗುಹೆ ಗೆ ಹೋಗತ್ತಿದ್ದೆ.
ಕರ್ನಾಟಕ ವಿದ್ಯುತ ನಿಗಮ ರವರ ನಾಗಝರಿ  ವಿದ್ಯುದಾಗಾರ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯೊಂದರಲ್ಲಿ ಸೇವೆಸಲ್ಲಿಸುತ್ತಿದ್ದೆ. ನಾಗಝರಿ ವಿದ್ಯುದಾಗಾರ ಇರುವದು, ಅಂಬಿಕಾನಗರ ಟೌನಶಿಪ  ದಿಂದ
10 ಕಿ.ಮಿ ದೂರ  ನೇರ ತಳಕ್ಕೆ ಇರುವ ಕಾಳಿನದಿ ದಡದ ಮೇಲೆ. ಈ ಪ್ರದೇಶದ  ಹೆಸರು ಬಾಟಮ್ ಎಂದಿತ್ತು. ಬಾಟಮ್ ದಿಂದ ಸ್ವಲ್ಪ ದೂರ ನಡೆದು,ಕಾಳಿ ಹೊಳೆ ದಾಟಿ ಗುಡ್ಡಏರಿ ,  ನೂರಾರು ಮೆಟ್ಟಳು ಹತ್ತಿ ಕವಳ ಗುಹೆಗೆ ಹೋಗುತ್ತಿದ್ದೆವು.
 ಕಷ್ಟಕರ ಅರಣ್ಯ ದಾರಿ.
ಪ್ರಕೃತಿದತ್ತವಾಗಿ ನಿರ್ಮಾಣವಾಗಿರುವ ಗುಹೆ.
ಗುಹೆ ಪ್ರವೇಶದ್ವಾರದಲ್ಲಿ ಒಂದು ದೇವಾಲಯವಿದೆ. ಇಲ್ಲಿ ತಲುಪಿದ ನಂತರ, ಶಿವಲಿಂಗ ದರ್ಶನಕ್ಕೆ ನಾವು  ಗುಹೆ ಪ್ರವೇಶಿಸಬೇಕಾಗುತ್ತದೆ.
ತೀರಾ ಇಕ್ಕಟ್ಟಾದ ಗುಹೆ . ಒಮ್ಮೆ ಒಬ್ಬರು ಮಾತ್ರ ತೆವಳುತ್ತಾ ಪ್ರವೇಶಿಸ ಬೇಕಾಗುತ್ತದೆ. ಗುಹೆ ಒಳಗೆ ನೈಸರ್ಗಿಕವಾಗಿ ರೂಪುಗೊಂಡ ಬೃಹತ್ ಆಕಾರದ ಶಿವಲಿಂಗವಿದೆ. ಪ್ರಕೃತಿಯ ಪವಾಡವೇ ಸರಿ.ಸುಮಾರು 4 ಅಡಿ ಎತ್ತರ ಮತ್ತು 3 - 4 ಅಡಿ ವ್ಯಾಸ ಆಕಾರದ ಈ ಶಿವಲಿಂಗವೆ ಗುಹೆ ದೇವಾಲಯದ ವಿಶೇಷ ಆಕರ್ಷಣೆ.ಗುಹೆಯ ಮೇಲ್ಚಾವಣಿಯಲ್ಲಿರುವ ಆಕಳ ಕೆಚ್ಚಲು ಆಕಾರದ ಕಲ್ಲೊಂದರಿಂದ ನೀರ ಹನಿ ಒಂದೊಂದಾಗಿ ಈ
ಶಿವಲಿಂಗದ ಮೇಲೆ ಸದಾ ಬಿಳುತ್ತಿರುತ್ತದೆ. ಶಿವಲಿಂಗಕ್ಕೆ ಅಭಿಷೇಕ ಆಗುತ್ತಾಯಿದೆ ಎಂಬ ಭಾವನೆ ಬರುತ್ತದೆ.ಈ ಶಿವಲಿಂಗ " ಕವಳ" ಆಕಾರ ಹೊಂದಿದೆ ಅಂದರೆ ವಿಳ್ಯದೆಲೆಮೇಲೆ ಗುಂಡುಅಡಿಕೆ ಇಟ್ಟಾಂಗೆ ಗೋಚರಿಸುತ್ತದೆ. ಅದಗೋಸ್ಕರ ಈ ಗುಹೆಗೆ " ಕವಳ" ಎಂದು ಹೆಸರು ಬಂದಿರಬಹುದು.
ಈ ಗುಹೆಯಲ್ಲಿ ಪ್ರಾಚೀನ ಕಾಳದಲ್ಲಿ ಸಿದ್ಧ ಪಂಥಕ್ಕೆ ಸೇರಿದ ಕಪಿಲ ಸಿದ್ದ ಮುನಿ ಎಂಬಾತ ಅಗ್ನಿ ಹೋತ್ರ ತಪಸ್ಸುಗಳನ್ನ ಮಾಡಿಕೊಂಡಿದ್ದರಂತೆ. ಆ ಮುನಿಯ ಹೆಸರಿನಲ್ಲಿ " ಸಿದ್ದನ ಗುಹೆ" ಅಂತಲೂ ಗುರುತಿಸುತ್ತಾರೆ.
ಈ ಗುಹೆ ಮೈಲುದೂರಕ್ಕೆ ಸಾಗಿದೆ ಎಂದು ಹೇಳುತ್ತಾರೆ. ಮುಂದೆ ಸಾಗಿದಂತೆ ಗುಹೆ ಕಿರಿದಾಗಿದ್ದು, ಕಗ್ಗತ್ತಲಿನಿಂದ ಕೂಡಿದೆ. ಶಿವರಾತ್ರಿ ದಿನ ಗುಹೆಯೋಳಗೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ.ಗುಹೆ
 ಒಳಗೆ  ಮಾನವ ನಿರ್ಮಿತ ವಿಗ್ರಹ ಹಾಗೂ ಶಿಲ್ಪಕಲಾಕೃತಿ ಗಳು ಇವೆ .
ಜಾಗೃತ ಶೈವ ಪುಣ್ಯಕ್ಷೇತ್ರ ಎಂದು ಹೇಳಲಾಗುತ್ತಿರುವ ಅಭಯಾರಣ್ಯದಲ್ಲಿರುವ ಕವಳ ಗುಹೆ ಪ್ರಕೃತಿಯ ಪವಾಡವೇ ಸರಿ.